udupi ಪತ್ರಕರ್ತೆ ಆರತಿ ಗಿಳಿಯಾರು ಮೇಲೆ ಹಲ್ಲೆ ಆರೋಪ: ಕೋಟ ಠಾಣೆಯಲ್ಲಿ ಪ್ರಕರಣ ದಾಖಲು
Thursday, April 16, 2026
ಕೋಟ: ಬ್ರಹ್ಮಾವರ ತಾಲೂಕು ಮೂಡುಗಿಳಿಯಾರು ಗ್ರಾಮದ ನಿವಾಸಿ ಹಾಗೂ ನ್ಯೂಸ್ ದಿನಪತ್ರಿಕೆಯ ಉಪಸಂಪಾದಕಿ ಆರತಿ ಗಿಳಿಯಾರು (31) ಅವರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 15.04.2026 ರಂದು ವಡ್ಡರ್ಸೆ ಗ್ರಾಮದ ಪ್ರಣುತ್ ಗಾಣಿಗ ಎಂಬಾತನ ಮನೆ ಸಮೀಪದ ಸುಮಾರು 1 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡಲಾಗುತ್ತಿದೆ ಎಂಬ ಮಾಹಿತಿ ತಿಳಿದು, ಆರತಿ ಗಿಳಿಯಾರು ಅವರು ಸ್ಥಳಕ್ಕೆ ತೆರಳಿ ರಸ್ತೆಯಲ್ಲಿ ನಿಂತು ಜಿಪಿಎಸ್ ಫೋಟೋಗಳನ್ನು ತೆಗೆದು ವರದಿ ಮಾಡುತ್ತಿದ್ದರು.
ಈ ವೇಳೆ ಮಧ್ಯಾಹ್ನ ಸುಮಾರು 13.00 ರಿಂದ 13.15 ಗಂಟೆಯ ಅವಧಿಯಲ್ಲಿ ಆರೋಪಿ ಪ್ರಣುತ್ ಗಾಣಿಗ, ಅವರ ಚಿಕ್ಕಮ್ಮ ಹಾಗೂ ಇತರ ಸಹಚರರು ಸೇರಿ ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 66/2026 ದಾಖಲಾಗಿ, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 352, 351(2) r/w 3(5) ಹಾಗೂ ಎಸ್ಸಿ/ಎಸ್ಟಿ (ಅತ್ಯಾಚಾರ ತಡೆ) ಕಾಯ್ದೆಯ 3(1)(r), 3(1)(s) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.