udupi ವ್ಯಕ್ತಿಯೊಬ್ಬರಿಗೆ ಆನ್ಲೈನ್ ವಂಚನೆ: 4.86 ಲಕ್ಷ ರೂ. ನಷ್ಟ
Thursday, April 16, 2026
ಉಡುಪಿ : ಪರಿಚಯದ ವ್ಯಕ್ತಿಯೊಬ್ಬರ ಮೊಬೈಲ್ ನಂಬರ್ ನಿಂದ ವಾಟ್ಸಾಪ್ನಲ್ಲಿ ಬಂದ ಆರ್.ಟಿ.ಒ ಚಲನ್ ಹೆಸರಿನ ನಕಲಿ ಎಪಿಕೆ (APK) ಫೈಲ್ ಡೌನ್ಲೋಡ್ ಮಾಡಿದ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹4, 86,113 ಹಣವನ್ನು ಕಳೆದುಕೊಂಡಿದ್ದಾರೆ.
ಪಡುಬಿದ್ರಿಯ ಅಬ್ದುಲ್ ಹಮೀದ್ ವಂಚನೆಗೊಳಗಾದವರು. ಏಪ್ರಿಲ್ 12ರಂದು ಅಬ್ದುಲ್ ಹಮೀದ್ ಅವರಿಗೆ ತಮ್ಮ ಪರಿಚಯಸ್ಥ ಕುಮಾರಸ್ವಾಮಿ ಎಂಬುವವರ ಮೊಬೈಲ್ ಸಂಖ್ಯೆಯಿಂದ “R.T.O challan E-Court notification” ಎಂಬ ಹೆಸರಿನ ಫೈಲ್ ಬಂದಿತ್ತು. ಇದನ್ನು ಅಧಿಕೃತವೆಂದು ನಂಬಿದ ಹಮೀದ್, ಫೈಲ್ ಡೌನ್ಲೋಡ್ ಮಾಡಿದ್ದಾರೆ. ಇದಾದ ಮರುದಿನವೇ, ಅಂದರೆ ಏಪ್ರಿಲ್ 13ರಂದು ಅವರ ಕೆನರಾ ಬ್ಯಾಂಕ್ನ ಪಡುಬಿದ್ರಿ ಹಾಗೂ ಅಂಕೋಲಾ ಶಾಖೆಯ ಖಾತೆಗಳಿಂದ ಹಂತ ಹಂತವಾಗಿ ಹಣ ಕಡಿತವಾಗಿದೆ.
ಸೈಬರ್ ಖದೀಮರು ಕುಮಾರಸ್ವಾಮಿ ಅವರ ಮೊಬೈಲ್ ಹ್ಯಾಕ್ ಮಾಡಿ ಈ ಲಿಂಕ್ ಕಳುಹಿಸಿರುವ ಸಾಧ್ಯತೆಯಿದೆ. ಒಟ್ಟು ₹4,86,113.74 ವರ್ಗಾವಣೆಯಾಗಿದ್ದು, ಹಮೀದ್ ಅವರು ಉಡುಪಿ ಸೆನ್ (CEN) ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಐಟಿ ಕಾಯ್ದೆ ಹಾಗೂ ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.