COSTALNEWS/ ಕುಂದಾಪುರ: ಎಲ್ಐಸಿ ರಸ್ತೆಯಲ್ಲಿ ಉರಿಯದ ದಾರಿದೀಪ — ಕತ್ತಲಲ್ಲಿ ಸಾರ್ವಜನಿಕರ ಪರದಾಟ!
Thursday, August 13, 2026
ಕುಂದಾಪುರ ಪುರಸಭೆ ವ್ಯಾಪ್ತಿಯ ಎಲ್ಐಸಿ ರಸ್ತೆಯ ವ್ಯಾಸರಾಜ ಕಲ್ಯಾಣ ಮಂಟಪದ ಪಕ್ಕದ ಶಕುಂತಲಾ ಶೆಟ್ಟಿ ಅವರ ಮನೆಯ ಎದುರುಗಡೆ ಇರುವ ಪುರಸಭೆ ರಸ್ತೆಯಲ್ಲಿ ಕಳೆದ ಮೂರು ತಿಂಗಳಿಂದ ದಾರಿದೀಪ ಉರಿಯದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಸ್ತೆಯಲ್ಲಿ ವಿದ್ಯುತ್ ಕಂಬವಿದ್ದರೂ ದೀಪ ಮಾತ್ರ ಉರಿಯುತ್ತಿಲ್ಲ. ರಾತ್ರಿ ವೇಳೆಯಲ್ಲಿ ಈ ರಸ್ತೆಯಲ್ಲಿ ಸಂಚರಿಸುವ ಸ್ಥಳೀಯರು ಕತ್ತಲಿನ ನಡುವೆ ವಿಷಪೂರಿತ ಹಾವು, ಚೇಳು ಸೇರಿದಂತೆ ಇತರ ಅಪಾಯಗಳ ಭಯದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಿವಾಸಿಗಳು COSTALNEWS ಗೆ ಮಾಹಿತಿ ನೀಡಿದ್ದಾರೆ.
ದಾರಿದೀಪದ ಸಮಸ್ಯೆ ಕುರಿತು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಯದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ನಿವಾಸಿ ಸಂತೋಷ್ ಮೊಗವೀರ ಅವರು ಪುರಸಭೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು,
“ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುವುದು ಸರಿಯಲ್ಲ. ವಿದ್ಯುತ್ ಕಂಬಗಳಿಗೆ ದೀಪ ಅಳವಡಿಸುವ ಟೆಂಡರ್ ನೀಡಿದವರು ವೈಜ್ಞಾನಿಕ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ.
ಕುಂದಾಪುರ ಪುರಸಭೆ ಅಧಿಕಾರಿಗಳಿಗೆ ಇದೀಗ ಪ್ರಶ್ನೆ ಏ ಪ್ರಶ್ನೆ ಏನೆಂದರೆ—
ಮೂರು ತಿಂಗಳಿಂದ ಉರಿಯದ ದಾರಿದೀಪ ಪುರಸಭೆ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ?
ಜನರು ಕತ್ತಲಲ್ಲಿ ಪರದಾಡುವವರೆಗೂ ಅಧಿಕಾರಿಗಳು ಕಾಯಬೇಕೇ?
ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣವೇ ದಾರಿದೀಪ ದುರಸ್ತಿ ಮಾಡಿ ಬೆಳಕು ಒದಗಿಸಬೇಕು ಎಂಬುದು ಸ್ಥಳೀಯರ ಆಗ್ರಹ.