COSTALNEWS/ಮರವಂತೆ ಮಾರಸ್ವಾಮಿ ಜಾತ್ರೆ: ಭಕ್ತಿ ಪರವಶತೆಯಲ್ಲಿ ಲಕ್ಷಾಂತರ ಭಕ್ತರು – ಪೊಲೀಸರ ಕಾರ್ಯಕ್ಕೆ ಜನಮೆಚ್ಚುಗೆ!
Monday, August 17, 2026
ಬೈಂದೂರು: ಕರಾವಳಿಯ ಪ್ರಸಿದ್ಧ ಕಾರ್ಣಿಕ ಕ್ಷೇತ್ರ, ಬೈಂದೂರು ತಾಲೂಕಿನ ಮರವಂತೆಯ ಮಾರಸ್ವಾಮಿ (ಶ್ರೀ ವರಾಹ ಸ್ವಾಮಿ) ದೇವಾಲಯದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆಯು ಅತ್ಯಂತ ಅದ್ದೂರಿ ಹಾಗೂ ಶ್ರದ್ಧಾ-ಭಕ್ತಿಯಿಂದ ನೆರವೇರಿದೆ.
ವರ್ಷಂಪ್ರತಿ ನಡೆಯುವ ಈ ಐತಿಹಾಸಿಕ ಜಾತ್ರಾ ಮಹೋತ್ಸವಕ್ಕೆ ಈ ಬಾರಿ ಅಭೂತಪೂರ್ವ ಜನಸಾಗರವೇ ಹರಿದುಬಂದಿತ್ತು. ಅಂದಾಜು 70 ಸಾವಿರದಿಂದ 1 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ, ಶ್ರೀ ವರಾಹ ಸ್ವಾಮಿಯ ದರ್ಶನ ಪಡೆದು ಧನ್ಯತೆ ಮೆರೆದರು. ಬಿರುಬಿಸಿಲು ಹಾಗೂ ಸುರಿಯುವ ಮಳೆಯನ್ನೂ ಲೆಕ್ಕಿಸದೆ ಜನಸಾಗರ ದೇವಾಲಯದತ್ತ ಹರಿದುಬಂತು.
ಶ್ರೀ ದೇವರಿಗೆ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನಗಳು, ಹೂವಿನ ಅಲಂಕಾರಗಳು ಸೇರಿದಂತೆ ಆಗಮಿಸಿದಂತ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ಮಹಾ ಅನ್ನಪ್ರಸಾದ ನೀಡಲಾಯಿತು
ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಂತಿರುವ ಈ ಕ್ಷೇತ್ರದಲ್ಲಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಭಕ್ತರು ಸೇರಿದರೂ, ಯಾವುದೇ ರೀತಿಯ ನೂಕುನುಗ್ಗಲು ಅಥವಾ ಟ್ರಾಫಿಕ್ ಸಮಸ್ಯೆ ಎದುರಾಗಲಿಲ್ಲ. ಗಂಗೊಳ್ಳಿ ಪೊಲೀಸ್ ಅಧಿಕಾರಿ ಅವರ ನೇತೃತ್ವದಲ್ಲಿ, ವಿವಿಧ ಠಾಣೆಗಳಿಂದ ಆಗಮಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರಾವಳಿ ಪೊಲೀಸ್ ಪಡೆ, ಹೋಂ ಗಾರ್ಡ್, ಲೈಫ್ ಗಾರ್ಡ್, ಪ್ರವಾಸೋದ್ಯಮ ಸಿಬ್ಬಂದಿ, ಅತ್ಯಂತ ಅಚ್ಚುಕಟ್ಟಾಗಿ ಸಾರಿಗೆ ವ್ಯವಸ್ಥೆಯನ್ನು ನಿರ್ವಹಿಸಿದರು.
ಧಾರ್ಮಿಕ ಶ್ರದ್ಧೆ ಮತ್ತು ಕಟ್ಟುನಿಟ್ಟಿನ ಭದ್ರತೆಯೊಂದಿಗೆ ಈ ಬಾರಿಯ ಮರವಂತೆ ಮಾರಸ್ವಾಮಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಅತ್ಯಂತ ಸಂಭ್ರಮ-ಸಡಗರದಿಂದ ಮುಕ್ತಾಯಗೊಂಡಿದೆ.