COSTALNEWS/ BIG BREAKING ಗುಜ್ಜಾಡಿಯಲ್ಲಿ ಹುಚ್ಚು ಹಿಡಿದ ನಾಯಿಯ ಆರ್ಭಟ: ಗ್ರಾಮಸ್ಥರಲ್ಲಿ ಆತಂಕ
Monday, August 17, 2026
ಕುಂದಾಪುರ: ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿ–ಗುಜ್ಜಾಡಿ ಬಂಟರ ಗರಡಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಹುಚ್ಚು ಹಿಡಿದಿರುವ ಶಂಕೆ ವ್ಯಕ್ತವಾಗಿರುವ ನಾಯಿಯೊಂದು ಆರ್ಭಟಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಾಯಕವಾಡಿ ಕೆನರಾ ಬ್ಯಾಂಕ್ ಬಳಿಯೂ ಸೇರಿದಂತೆ ಗುಜ್ಜಾಡಿ ಗ್ರಾಮದ ವಿವಿಧ ಭಾಗಗಳಲ್ಲಿ ನಾಯಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಅದರ ವರ್ತನೆಯಿಂದ ಮಕ್ಕಳು ಹಾಗೂ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡಲು ಭಯಪಡುವ ಪರಿಸ್ಥಿತಿ ಎದುರಾಗಿದೆ.
“ಯಾವುದೇ ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು” ಎಂದು ಸ್ಥಳೀಯ ನಿವಾಸಿ ನಿತೇಶ್ ಮೊಗವೀರ ಗುಜ್ಜಾಡಿ ಅವರು COSTALNEWSಗೆ ತಿಳಿಸಿದ್ದಾರೆ.
ಮಕ್ಕಳ ಸುರಕ್ಷತೆ ಬಗ್ಗೆ ಆತಂಕ
ಗ್ರಾಮದ ಜನನಿಬಿಡ ಪ್ರದೇಶಗಳಲ್ಲಿ ನಾಯಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಶಾಲೆಗೆ ತೆರಳುವ ಮಕ್ಕಳು, ವೃದ್ಧರು ಹಾಗೂ ದಾರಿಹೋಕರ ಸುರಕ್ಷತೆ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ನಾಯಿ ಯಾರನ್ನಾದರೂ ಕಚ್ಚಿದ ಬಳಿಕ ಕ್ರಮ ಕೈಗೊಳ್ಳುವ ಬದಲು, ಮುನ್ನೆಚ್ಚರಿಕಾ ಕ್ರಮವಾಗಿ ತಕ್ಷಣವೇ ಸಂಬಂಧಪಟ್ಟ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
“ಅನಾಹುತವಾದ ಮೇಲೆ ಕ್ರಮ ಬೇಡ”
ನಾಯಿ ಹಿಡಿಯುವ ತಂಡವನ್ನು ಸ್ಥಳಕ್ಕೆ ಕಳುಹಿಸಿ, ಅದರ ಸ್ಥಿತಿಯನ್ನು ಪರಿಶೀಲಿಸಿ, ಸಾರ್ವಜನಿಕರಿಗೆ ಅಪಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುವರೇ? ಅಥವಾ ಯಾವುದೇ ಅನಾಹುತ ಸಂಭವಿಸಿದ ನಂತರವೇ ಕ್ರಮ ಕೈಗೊಳ್ಳುವರೇ? ಎಂಬ ಪ್ರಶ್ನೆ ಇದೀಗ ಗುಜ್ಜಾಡಿ ಗ್ರಾಮಸ್ಥರಲ್ಲಿ ಮೂಡಿದೆ.