COSTALNEWS | ಗಂಗೊಳ್ಳಿ ಲೈಟ್ಹೌಸ್ ಬಳಿ 10 ಕೆಜಿ ತೂಕದ ಹೆಬ್ಬಾವು ಸೆರೆ:ಉರಗ ತಜ್ಞರ ಸಮಯಪ್ರಜ್ಞೆಯಿಂದ ಸುರಕ್ಷಿತ ಕಾರ್ಯಾಚರಣೆ
Monday, July 27, 2026
ಕುಂದಾಪುರ, ಕುಂದಾಪುರ ತಾಲೂಕಿನ ಗಂಗೊಳ್ಳಿಯ ಕೋಟೆಗುಡ್ಡೆ ಲೈಟ್ಹೌಸ್ ಸಮೀಪ ಭಾನುವಾರ ರಾತ್ರಿ ಸುಮಾರು 8:30ರ ವೇಳೆಗೆ ಬ್ರಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡ ಘಟನೆ ನಡೆದಿದೆ.
ಬೈಣಿ ನಾಗರಾಜ್ ಖಾರ್ವಿ ಹಾಗೂ ಮಹೇಶ್ ಖಾರ್ವಿ ನಡೆದುಕೊಂಡು ಬರುತ್ತಿದ್ದ ವೇಳೆ ರಸ್ತೆಯ ಮಧ್ಯೆ ಹೆಬ್ಬಾವನ್ನು ಕಾಣಿಸಿಕೊಂಡಿದೆ,
ತಕ್ಷಣ ಉರಗ ತಜ್ಞ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ಮಡಿ ನಾಗರಾಜ್ ಖಾರ್ವಿ ಮತ್ತು ಗಣೇಶ್ ಖಾರ್ವಿ ಅವರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ತಂಡ, ಅಷ್ಟರಲ್ಲೇ ಗಿಡಗಂಟಿಗಳೊಳಗೆ ಸೇರಿಕೊಂಡಿದ್ದ ಹೆಬ್ಬಾವನ್ನು ಸತತ ಪ್ರಯತ್ನದ ಬಳಿಕ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಯಶಸ್ವಿಯಾಯಿತು.
ಸೆರೆಹಿಡಿದ ಹೆಬ್ಬಾವಿನ ತೂಕ ಸುಮಾರು 10 ಕೆಜಿ ಇರಬಹುದೆಂದು ಅಂದಾಜಿಸಲಾಗಿದ್ದು, ಮರುದಿನ ಬೆಳಿಗ್ಗೆ ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉರಗ ತಜ್ಞ ಮಡಿ ನಾಗರಾಜ್ ಖಾರ್ವಿ, ಇತ್ತೀಚಿನ ದಿನಗಳಲ್ಲಿ ಹೆಬ್ಬಾವುಗಳಷ್ಟೇ ಅಲ್ಲದೆ ನಾಗರಹಾವು, ಕೆರೆಹಾವು ಹಾಗೂ ಅತ್ಯಂತ ವಿಷಕಾರಿ ಕೊಳಕು ಮಂಡಲ ಹಾವುಗಳ ಕಾಣಿಸಿಕೊಳ್ಳುವಿಕೆ ಹೆಚ್ಚಾಗಿದ್ದು, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಕತ್ತಲ ಪ್ರದೇಶಗಳಲ್ಲಿ ಸಂಚರಿಸುವ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.
ಕಾರ್ಯಾಚರಣೆಯ ವೇಳೆ ಲೈಟ್ಹೌಸ್ ವಠಾರದ ಯುವಕರು ಸಹಕಾರ ನೀಡಿದ್ದು, ಸೆರೆಹಿಡಿದ ಹೆಬ್ಬಾವನ್ನು ಸುರಕ್ಷಿತವಾಗಿ ಸಾಗಿಸಲು ವನ್ಯಜೀವಿ ಸಂರಕ್ಷಕರಾದ ದಾಸ ಆಚಾರಿ ಮತ್ತು ಸಂದೀಪ್ ಪೂಜಾರಿ ಸಹ ನೆರವಾದರು.
ವರದಿ: ರಾಜೇಶ್ ಪೂಜಾರಿ ತ್ರಾಸಿ