DK :ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ಬಲಿ ಪಡೆದ ರೋಡ್ ರೋಲರ್ ..!
Saturday, May 9, 2026
ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಗಾಂಧಿಪಾರ್ಕ್ ಸಮೀಪ ನಡೆದ ಭೀಕರ ದುರಂತವೊಂದು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ಸರ್ವೀಸ್ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದ ವೇಳೆ, ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯ ಮೇಲೆ ರೋಡ್ ರೋಲರ್ ಹರಿದ ಪರಿಣಾಮ ಆತ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾನೆ.
ಮೃತ ವ್ಯಕ್ತಿ ಉತ್ತರ ಭಾರತದ ಮೂಲದ ಕಾರ್ಮಿಕನಾಗಿದ್ದು, ಕಾಮಗಾರಿಯ ಸ್ಥಳದ ಸಮೀಪವೇ ವಿಶ್ರಾಂತಿ ಪಡೆಯುತ್ತಿದ್ದನೆಂದು ತಿಳಿದುಬಂದಿದೆ. ಬೆಳಗಿನ ಜಾವ ಕಾಮಗಾರಿ ಪುನರಾರಂಭವಾದಾಗ, ಚಾಲಕನಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿ ಕಾಣಿಸದೆ ಹೋಗಿದ್ದು, ರೋಡ್ ರೋಲರ್ ಆತನ ಮೇಲೆಯೇ ಹರಿದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.