COSTALNEWS BIG BREAKING — ಗಂಗೊಳ್ಳಿಯಲ್ಲಿ ಮುಳುಗುತ್ತಿದ್ದ ಬೋಟ್ ರಕ್ಷಣೆ
Wednesday, August 26, 2026
ಗಂಗೊಳ್ಳಿ: ಅರಬ್ಬಿ ಸಮುದ್ರದ ಅಬ್ಬರದ ಅಲೆಗಳ ನಡುವೆ ಮುಳುಗುವ ಹಂತಕ್ಕೆ ತಲುಪಿದ್ದ ಬೋಟನ್ನು ಗಂಗೊಳ್ಳಿ ಕರಾವಳಿ ಪೊಲೀಸರು ಹಾಗೂ ಸ್ಥಳೀಯರ ಸಮಯ ಪ್ರಜ್ಞೆಯಿಂದ ಯಶಸ್ವಿಯಾಗಿ ರಕ್ಷಿಸಲಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಬಂದರಿನಿಂದ ಸುಮಾರು 2.5 ನಾಟಿಕಲ್ ಮೈಲು ದೂರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಅಪಾಯದ ಸ್ಥಿತಿಗೆ ತಲುಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಗಂಗೊಳ್ಳಿ ಕರಾವಳಿ ಪೊಲೀಸ್ ಠಾಣೆಯ ಪಿಎಸ್ಐ ರಮೇಶ್ ಹಾಗೂ ಪಿಎಸ್ಐ ಸುಬ್ರಹ್ಮಣ್ಯ ಅವರ ನೇತೃತ್ವದಲ್ಲಿ ತಕ್ಷಣ ಕಾರ್ಯಾಚರಣೆ ಆರಂಭಿಸಲಾಯಿತು.
ಅಬ್ಬರಿಸುತ್ತಿದ್ದ ಸಮುದ್ರದ ನಡುವೆ ಕ್ಷಣಕ್ಷಣಕ್ಕೂ ಅಪಾಯ ಹೆಚ್ಚಾಗುತ್ತಿದ್ದರೂ, ಕರಾವಳಿ ಪೊಲೀಸರು ಧೈರ್ಯದಿಂದ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ನಿವಾಸಿಗಳೂ ಪೊಲೀಸರೊಂದಿಗೆ ಕೈಜೋಡಿಸಿ ಸಮಯ ಪ್ರಜ್ಞೆ ಮೆರೆದ ಪರಿಣಾಮ, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಕೊನೆಗೂ ಬೋಟನ್ನು ಸುರಕ್ಷಿತವಾಗಿ ದಡಕ್ಕೆ ತರಲಾಗಿದ್ದು, ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಸಮುದ್ರದ ಅಬ್ಬರದ ನಡುವೆಯೂ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಬೋಟನ್ನು ರಕ್ಷಿಸಿದ ಗಂಗೊಳ್ಳಿ ಕರಾವಳಿ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಅಲೆಗಳ ಅಬ್ಬರ… ಮುಳುಗುವ ಹಂತದಲ್ಲಿದ್ದ ಬೋಟ್… ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಆತಂಕ…!
ಆದರೆ ಪೊಲೀಸರ ಸಮಯ ಪ್ರಜ್ಞೆ ಮತ್ತು ಧೈರ್ಯದಿಂದ ದೊಡ್ಡ ದುರಂತ ತಪ್ಪಿತು!